Friday, September 20, 2024
ಸುದ್ದಿ

ಅಡ್ಯನಡ್ಕ: ಭಿಕ್ಷಾಟನೆ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ – ಕಹಳೆ ನ್ಯೂಸ್

ಅಡ್ಯನಡ್ಕ: ಬಂಟ್ವಾಳ ತಾಲೂಕು ಅಡ್ಯನಡ್ಕದ ಅಡ್ಯನಡ್ಕ ವಿದ್ಯಾವರ್ಧಕ ಸಂಘದಿಂದ ನಡೆಸಲ್ಪಡುವ ಜನತಾ ವಿದ್ಯಾಸಂಸ್ಥೆಗಳ ವತಿಯಿಂದ ಇಂದು ಅ. 2ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಪ್ರಯುಕ್ತ ‘ಭಿಕ್ಷಾಟನೆ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ’ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಸಾಹಿತಿ ಮತ್ತು ಸಂಘಟಕ ಭಾಸ್ಕರ ಅಡ್ವಳ ಅವರು ಆಗಮಿಸಿ ಉಪನ್ಯಾಸ ನೀಡಿದರು. ಸಮಾಜದಲ್ಲಿರುವ ಕಳಂಕವನ್ನು ನಿವಾರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಭಿಕ್ಷಾಟನೆಯು ಸಮಾಜದ ಪ್ರಗತಿಗೆ ತಡೆಯೊಡ್ಡುತ್ತಿರುವ ಒಂದು ಜ್ವಲಂತ ಸಮಸ್ಯೆಯಾಗಿದೆ. ಸತ್ಪಾತ್ರರಿಗೆ ಮಾತ್ರ ದಾನವನ್ನು ನೀಡಬೇಕು. ಅದರಂತೆ ಭಿಕ್ಷೆಯನ್ನು ಬೇಡುವುದು ಮತ್ತು ನೀಡುವುದು ಎರಡೂ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆ ಬಳಿಕ ಅವರು ಭಿಕ್ಷಾಟನೆ ನಿರ್ಮೂಲನಾ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ವಿದ್ಯಾರ್ಥಿಗಳಾದ ಮೊಹಮ್ಮದ್ ಹಾಸಿಕ್, ಪಂಚಮಿಕುಮಾರಿ, ಜಗದೀಶ್ ಹಾಗೂ ಜಯಶ್ರೀ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನಗಳನ್ನು ವಿತರಿಸಲಾಯಿತು.

ಜಾಹೀರಾತು

ಕೇಪು ಗ್ರಾ.ಪಂ. ಸದಸ್ಯ ಅಬ್ದುಲ್ ಕರೀಮ್ ಕುದ್ದುಪದವು ಮುಖ್ಯ ಅತಿಥಿಯಾಗಿ ಮಾತನಾಡಿದರು. ಜನತಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಅವರು ಗಾಂಧಿ ಜಯಂತಿ ಆಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್ ಗಾಂಧೀಜಿಯವರ ಭಾವಚಿತ್ರಕ್ಕೆ ಆರತಿ ಬೆಳಗಿ ಪುಷ್ಪಾರ್ಚನೆಗೈದರು. ಬಳಿಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಿಯ ಶಿಕ್ಷಕ ಎಸ್. ರಾಜಗೋಪಾಲ ಜೋಶಿ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕಿ ಗೀತಾ ಎಚ್ ಶೆಟ್ಟಿ ವಂದಿಸಿದರು. ಇದೇ ಸಂದರ್ಭದಲ್ಲಿ ಜನತಾ ಪ್ರೌಢಶಾಲೆಯ ‘ಚೈತನ್ಯ ಗ್ರಾಹಕ ಸಂಘ’ದ ವತಿಯಿಂದ ನಡೆದ ಸ್ವಚ್ಛತಾ ಅಭಿಯಾನದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಭಾರತೀಯ ಸಮಾಜ ಜೀವನ ಹಾಗೂ ಶಿಕ್ಷಣ ಸಂಶೋಧನಾ ಸಂಸ್ಥೆ ಇವರ ಸಹಯೋಗದೊಂದಿಗೆ ಅಡ್ಯನಡ್ಕದ ಜನತಾ ಪ್ರೌಢಶಾಲೆ, ಜನತಾ ಆಂಗ್ಲಮಾಧ್ಯಮ ಶಾಲೆ, ಜನತಾ ಪ.ಪೂ. ಕಾಲೇಜು ಮತ್ತು ಜನತಾ ಅನುದಾನಿತ ಹಿ.ಪ್ರಾ. ಶಾಲೆಯ ಸಂಯುಕ್ತಾಶ್ರಯದಲ್ಲಿ ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.