Friday, September 20, 2024
ಸುದ್ದಿ

ವಿದ್ಯಾರ್ಥಿಯಾಗಿದ್ದಾಗ ಶೋಕಿ ಮಾಡುವುದೇ ಜೀವನವಾಗಬಾರದು: ವೇಣುಗೋಪಾಲ್ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಯಾಗಿದ್ದಾಗ ಶೋಕಿ ಮಾಡಬೇಕು ಎನ್ನುವ ಆಸೆ ಇರುವುದು ಸಹಜ. ಆದರೆ ಅದೇ ಜೀವನವಾಗವಾರದು. ಹೊಟ್ಟೆಪಾಡಿನ ಪ್ರಶ್ನೆ ಬಂದಾಗ ಕಳೆದು ಹೋದ ಸಮಯವನ್ನು ನೆನೆಸಿಕೊಂಡು ಪಶ್ಚಾತ್ತಾಪ ಪಡುವಂತಾಗಬಾರದು. ನಾವು ಕಲಿತ ವಿದ್ಯೆ ನಮಗೆ ಅನ್ನ ನೀಡುವಂತಾಗಬೇಕು ಎಂದು ಸ್ಯಾಕ್ಸೊಫೋನ್ ವಾದಕ, ಕಲಾವಿದ ವೇಣುಗೋಪಾಲ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸುವ ‘ಜನ-ಮನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳಾಗಿದ್ದಾಗ ನಮಗೆ ನಮ್ಮ ಖುಷಿಯೊಂದೇ ಮುಖ್ಯವಾಗಿಬಿಡುತ್ತದೆ. ನಮ್ಮನ್ನು ಓದಿಸುವುದಕ್ಕಾಗಿ ಮನೆಯವರು ಪಡುತ್ತಿರುವ ಕಷ್ಟ ನಗಣ್ಯವಾಗುತ್ತದೆ. ಉಪನ್ಯಾಸಕ ವೃಂದದ ಮಾತು ರುಚಿಸುವುದೇ ಇಲ್ಲ. ಜೀವನಕ್ಕೆ ಸಂಪಾದನೆ ಎಷ್ಟು ಮುಖ್ಯ ಎನ್ನುವುದರ ಅರಿವಾಗುವುದು ಸರಿಯಾದ ಕೆಲಸ ದೊರೆಯದಾಗ. ಕೆಲವು ಸಂಸ್ಥೆಗಳು ನಮ್ಮನ್ನು ಹಗಲು ರಾತ್ರಿ ಎನ್ನದೆ ದುಡಿಸಿಕೊಂಡು ಕನಿಷ್ಟ ವೇತನವೂ ಸಿಗದೇ ಇದ್ದಾಗ ಕಣ್ಣಿರಿಡುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು

ಪ್ರತಿಯೊಬ್ಬರೂ ಒಂದಿಲ್ಲೊಂದು ಹವ್ಯಾಸವನ್ನು ಇರಿಸಿಕೊಳ್ಳಬೇಕು. ಹವ್ಯಾಸಗಳು ತಲ್ಲಿನತೆಯನ್ನು ತಂದು ಕೊಡುತ್ತವೆ. ಅವುಗಳಿಗೆ ನಮ್ಮ ನೋವನ್ನು ಮರೆಯಿಸಿ ಸಮಾಧಾನವನ್ನು ನೀಡುವ ಶಕ್ತಿಯಿದೆ. ಸಮಯದ ಮಹತ್ವವನ್ನು ಅರಿತವರಿಗೆ, ಗುರಿಯನ್ನು ಸಾಧಿಸಿಯೇ ತೀರುವೆವೆಂಬ ಛಲವುಳ್ಳವರಿಗೆ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ ಎಂದರು.

ಈ ಸಂದರ್ಭ ಕಾಲೇಜಿನ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಪ್ರಜ್ಞಾ ಬಾರ್ಯ, ರಾಧಿಕಾ ಕಾನತ್ತಡ್ಕ, ಸುಶ್ಮಿತಾ ಜಯಾನಂದ್, ಲ್ಯಾಬ್ ಸಹಾಯಕ ಸಂತೋಷ್ ಉಪಸ್ಥಿತರಿದ್ದರು. ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ಸ್ವಾಗತಿಸಿ, ವಿದ್ಯಾರ್ಥಿನಿ ಲಿಖಿತಾ ಗುಡ್ಡೆಮನೆ ವಂದಿಸಿದರು. ಅಕ್ಷಯ್ ಕುಮಾರ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿದರು.