Friday, September 20, 2024
ರಾಜಕೀಯಸುದ್ದಿ

ಕುಟುಂಬದವರನ್ನೇ ಕಣಕ್ಕಿಳಿಸುವುದು ಸರಿಯಲ್ಲ: ಜೆಡಿಎಸ್ ಮುಖಂಡರು – ಕಹಳೆ ನ್ಯೂಸ್

ಬೆಂಗಳೂರು: ಅಪ್ಪ-ಮಕ್ಕಳ ಪಕ್ಷ ಎಂಬ ಅಪವಾದದಿಂದ ಹೊರಬರಲು ವಿಧಾನಸಭಾ ಚುನಾವಣೆಗೆ ಮುನ್ನ ‘ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧಿಗಳು’ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಈಗ ಅವರಿಗೆ ಮುಳುವಾಗುತ್ತಿದೆ.

ರಾಮನಗರ, ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಭರ್ಜರಿ ವಿಜಯ ಪತಾಕೆ ಹಾರಿಸಿದ್ದ ಕುಮಾರಸ್ವಾಮಿ, ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ ರಾಮನಗರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಚುನಾವಣೆ ಪ್ರಚಾರಕ್ಕೆ ತೆರಳದಿದ್ದರೂ ನನ್ನನ್ನು ಗೆಲ್ಲಿಸಿದ ಹಾಗೂ ಒಕ್ಕಲಿಗರ ಪ್ರಾಬಲ್ಯವೇ ಹೆಚ್ಚಿರುವ ಈ ಕ್ಷೇತ್ರವನ್ನು ಶತಾಯಗತಾಯ ಉಳಿಸಿಕೊಳ್ಳಲೇಬೇಕೆಂಬುದು ಜೆಡಿಎಸ್ ಲೆಕ್ಕಾಚಾರ.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಷೇತ್ರದಲ್ಲಿ ಗೌಡರ ಕುಟುಂಬದವರು ಅಭ್ಯರ್ಥಿಯಾದರೆ ಮಾತ್ರ ಗೆಲುವು ಸುಲಭ ಹಾಗೂ ಬಿಜೆಪಿ ಮಟ್ಟ ಹಾಕಬಹುದು ಎಂಬುದನ್ನು ಮನಗಂಡಿರುವ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಕಣಕ್ಕಿಳಿಸಲು ಮುಂದಾಗಿದ್ದಾರೆ.

ಜಾಹೀರಾತು

‘ಚುನಾವಣೆಗೂ ಮುನ್ನ ಕುಟುಂಬದಿಂದ ಇಬ್ಬರು (ಕುಮಾರಸ್ವಾಮಿ ಮತ್ತು ರೇವಣ್ಣ) ಮಾತ್ರ ಸ್ಪರ್ಧಿಗಳು’ ಎಂದು ಸಾರಿ ಸಾರಿ ಹೇಳಿದ್ದೀರಿ. ಈಗ ನಿಮ್ಮ ಕುಟುಂಬದವರನ್ನೇ ಕಣಕ್ಕಿಳಿಸುವುದು ಸರಿಯಲ್ಲ. ಕ್ಷೇತ್ರದಲ್ಲಿ ಬಹುಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿ ಎಂದು ಮುಸ್ಲಿಮರು ಮಾತ್ರವಲ್ಲದೆ ಬಹುತೇಕ ಮುಖಂಡರು ಒತ್ತಡ ಹಾಕುತ್ತಿದ್ದಾರೆ.

ಎಲ್ಲ ಪಕ್ಷಗಳು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿರುವಾಗ ಜೆಡಿಎಸ್ ಟಿಕೆಟ್ ನೀಡಿದರೆ ಪಕ್ಷ ಅದರ ಪ್ರತಿಫಲ ಪಡೆಯಬಹುದು ಎಂಬುದು ಮುಖಂಡರ ವಾದ. ಅಲ್ಲದೆ ಪಕ್ಷದ ಆಯಕಟ್ಟಿನ ಹುದ್ದೆಯಲ್ಲಿರುವವರೇ ಅನಿತಾ ಸ್ಪರ್ಧೆಗೆ ಅಪಸ್ವರ ತೆಗೆದಿದ್ದಾರೆಂದು ಮೂಲಗಳು ಖಚಿತಪಡಿಸಿವೆ.