Friday, September 20, 2024
ಸುದ್ದಿ

ಕೆಎಸ್ಸಾರ್ಟಿಸಿ ಬಸ್ ಬೈಕ್‌ಗೆ ಡಿಕ್ಕಿ: ಬೈಕ್ ಸವಾರರಿಬ್ಬರು ಸಾವು – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಜಕ್ರಿಬೆಟ್ಟು ಎಂಬಲ್ಲಿ ಭಾನುವಾರ ಕೆಎಸ್ಸಾರ್ಟಿಸಿ ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ

ಮಂಗಳೂರು ಕುಡುಪು ನಿವಾಸಿ ಚರಣ್(18) ಹಾಗೂ ಬಂಟ್ವಾಳ ತಾಲೂಕು ವಾಮದಪದವು ಸಮೀಪದ ದಂಡೆಗೋಳಿ ನಿವಾಸಿ ಮುಹಮದ್ ನೌಶಾದ್(18) ಮೃತಪಟ್ಟವರು. ಅವರಿಬ್ಬರು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಐಟಿಐ ವಿದ್ಯಾರ್ಥಿಗಳಾಗಿದ್ದು, ಸ್ನೇಹಿತರಾದ್ದರು.
ಭಾನುವಾರ ಬೆಳಗ್ಗೆ ಬಿ.ಸಿ ರೋಡ್‌ನಿಂದ ಕಾರಿಂಜ ದೇವಸ್ಥಾನ ಕಡೆ ತೆರಳುತ್ತಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ವಿರುದ್ಧ ದಿಕ್ಕಿನಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸಹಿತ ಸವಾರರಿಬ್ಬರು ಬಸ್ ಅಡಿ ಸಿಲುಕಿಕೊಂಡಿದ್ದರು. ಸ್ಥಳೀಯ ನಿವಾಸಿಗಳು ಹರಸಾಹಸಪಟ್ಟು ಬಸ್‌ನಡಿಯಲ್ಲಿ ಸಿಲುಕಿ ಚಿಂತಾಜನಕ ಸ್ಥಿತಿಯಲ್ಲಿದ್ದ ಸವಾರರನ್ನು ಆಂಬುಲೆನ್ಸ್ ಮೂಲಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜಾಹೀರಾತು

ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಸ್ ಮುಂಭಾದ ಜಖಂಗೊಡಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ಪೇಟೆ ರಸ್ತೆ ಹಾಗೂ ಹೆದ್ದಾರಿ ಸೇರುವ ಸ್ಥಳ ಅಪಘಾತ ವಲಯವಾಗಿದ್ದು, ಈ ಪ್ರದೇಶದಲ್ಲಿ ಈಗಾಗಲೇ ಹಲವಾರು ಪ್ರಾಣಹಾನಿ ಸಂಭವಿಸಿದೆ. ಹೆದ್ದಾರಿಯಲ್ಲಿ ಅತೀವೇಗವಾಗಿ ವಾಹನಗಳು ಚಲಿಸುತ್ತಿದ್ದು, ಪೇಟೆ ರಸ್ತೆಯಿಂದ ಹೆದ್ದಾರಿ ಸೇರುವ ವಾಹನ ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.